ಎಲ್ಲೆಡೆಯೂ ಹರಡಿದ್ದು ಕೊನೆಗೊಮ್ಮೆ ಕರಗಿ ನೀರಾಗುವ ಆಕಾಶದಲ್ಲಿನ ಮೋಡದಂತೆ ಮನಸು ಕೂಡ. ಕಾರ್ಮುಗಿಲಿನಂತಹ ಸಮಸ್ಯೆಗಳಿದ್ದರೂ, ಬದುಕುವ ಛಲ ಇರುವವರಿಗೆ ಅದರಿಂದ ಹೊರಬರಲು ಕಷ್ಟವಾಗದು. ಗುರಿಯನ್ನು ಹುಡುಕುತ್ತಾ ಹೊರಟವನಿಗೆ ಗುರಿಮುಟ್ಟಲೇಬೇಕೆಂಬ ಛಲವಿದ್ದರೆ ಯಾವುದೇ ಅಡೆತಡೆಯೂ ಕಷ್ಟವೆನಿಸದು.
ಎಲ್ಲದರಲ್ಲಿಯೂ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಂಡು, ಸ್ಥಿರ ನಿರ್ಣಯಗಳನ್ನು ತೆಗೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಬೇಕು. ನಿರೀಕ್ಷೆ, ಭರವಸೆ, ಕಾಯುವಿಕೆ ಯಾವತ್ತಿಗೂ ಕೂಡ ಹುಸಿಯಾಗುವ, ಹುಸಿಯಾಗಿಸುವ ವಿಚಾರಕ್ಕಾಗಿ ಮೀಸಲಿಡಬಾರದು. ಮನಸ್ಸು ಪ್ರಶಾಂತವಾದಾಗ ಇವೆಲ್ಲವನ್ನು ಸ್ವಲ್ಪಮಟ್ಟಿಗೆ ಮುಂಚಿತವಾಗಿ ಗೃಹಿಸಲು ಸಾಧ್ಯವಾಗುತ್ತದೆ. ಸರಿಯಾದ ಆಹಾರ, ನಿದ್ರೆ, ಯೋಗ, ಪ್ರಾಣಾಯಾಮಗಳು ಮಾನಸಿಕ ಚಾಂಚಲ್ಯವನ್ನು ತೊಡೆದು ಮನಸ್ಸನ್ನು ನಿಯಂತ್ರಣದಲ್ಲಿಡುವುದರ ಜೊತೆಗೆ ಇಡೀ ಶರೀರವನ್ನು ನಿಯಂತ್ರಿಸುತ್ತದೆ.
ಓ ನನ್ನ ಕಾವ್ಯ ಕನ್ನಿಕೆ… ನೀನಿಲ್ಲದೆ ಎಷ್ಟೋ ರಾತ್ರಿಗಳನ್ನು ಕಳೆದುಬಿಟ್ಟಿದ್ದೇನೆ. ಅದ್ಯಾಕೋ ಮನಸ್ಸು ಸಹಿಸುತ್ತಿಲ್ಲ ನೀನಿಲ್ಲದ ಕ್ಷಣಗಳನು.., ಯಾಕೋ ಏನೋ ನನ್ನ ಮನದ ಜೋಕಾಲಿ ಅನಾಥವಾಗಿ ಹೋಗಿದೆ. ನೀ ಬರುವಿಯೆಂದು ಇನ್ನೂ ಅದನ್ನು ಬಿಚ್ಚದೆ ಇಟ್ಟಿದ್ದೇನೆ. ನೀನಂದು ಕೊಟ್ಟ “ಉಡುಗೊರೆ”ಯನ್ನು ಪ್ರತಿ ದಿನವೂ ಮನಸ್ಸಿನಾಳದಿಂದ ತೆಗೆದು ನೋಡುತ್ತೇನೆ. ನಿನ್ನ ಇರುವಿಕೆ ಇಲ್ಲದ್ದಿದ್ದರೂ ಇದ್ದಂತೆ ಭಾಸವಾಗುವುದು ಅದರಿಂದಾಗಿ ಮಾತ್ರ. ಅದು ಕಲ್ಪನೆಯೆಓದು ತಿಳಿದಾಗ ಜೋರಾಗಿ ಅಳಲು ಪ್ರಯತ್ನಿಸುತ್ತೇನೆ… ಆದರೆ ಕಣ್ಣೀರೇ ಇಲ್ಲದ ಕಂಗಳಿಂದ ಹೇಗೆ ಅಳಲಿ..? ವಿಚಿತ್ರ ಅಲ್ವಾ? ಆದರೂ ಸತ್ಯ. ನಿನ್ನನ್ನು ಮೊದಲ ನೋಡಿದಾಗ ಕನಸ ಗೋಪುರಗಳನ್ನೆಲ್ಲಾ ಕಟ್ಟಿಕೊಂಡ್ಡಿದ್ದೆ. ಆಗ ನನಗೇನು ತಿಳಿದಿತ್ತು.., ಅದೆಲ್ಲ ಬರಿಯ ಗಾಳಿಗೋಪುರಗಳೆಂದು…?
ನಿನ್ನ ಮನದಲ್ಲಿ ನನ್ನ ಸ್ಥಾನ ಎಲ್ಲಿಯೆಂದು ತಿಳಿಯುತ್ತಿಲ್ಲ. ಆದರೂ ಅದರೊಳಗೆ ಬರಲು ಪ್ರಯತ್ನಿಸುತ್ತಿದ್ದೇನೆ… ಏನು…?!!! ಬರಬೇಡಾ ಅಂತಿದ್ದೀಯಾ? ಸರಿ ನಿನ್ನಿಷ್ಟ. ಆದರೆ ನನ್ನ ಮರೆತು ಬಿಡಬೇಡ. ನೀನಂದ್ರೆ ನನ್ಗೆ ತುಂಬಾನೇ ಇಷ್ಟ… ನೀನೇನಂದೆ…? “ನಿರ್ಧಾರಗಳು ನನದಲ್ಲ ಇನ್ನು” ಅಂತ ತಾನೇ..? ಆಯ್ತು ಬಿಡು. ನಿನ್ನ ನಿರ್ಧಾರ ಶಾಶ್ವತ ಅಲ್ಲ ಅಂತಾದ್ರೆ ನನ್ನ ಯಾಕೆ ಪ್ರೀತಿಸಿದೆ.? ಸುಮ್ನೆ ತಮಾಷೆ ಮಾಡೋಣಾ ಅಂತ ಅಂದ್ಕೊಂಡಿಯಾ.? ಕಷ್ಟ ಕಣೇ, ಪ್ರೀತಿ ಎಂಬ ಎರಡಕ್ಷ್ರರದ ಜಾಗಕ್ಕೆ ಸ್ನೇಹ ಸೇರಿಸುವುದಕ್ಕೆ…
ನಿನಗಿದೆಲ್ಲ ಅರ್ಥ ಆಗಲ್ಲ. ಯಾವತ್ತೂ ನನ್ನೇ ಹಳಿಯುತ್ತಿರುತ್ತೀಯಲ್ಲಾ.? ಈಗ್ಯಾಕೆ ನನ್ನ್ ಪುನಃ ಕಾಡುತ್ತಿದ್ದೀ..? ಬೇಡ ಕಣೇ, ಈ ಜೀವನವೇ ವ್ಯರ್ಥ ಅಂತ ಅನಿಸುತ್ತಿದೆ. ಇನ್ನೊಮ್ಮೆ ಕಾಡಿಸ್ಬೇಡ. ಇನ್ಯಾವತ್ತೂ ನಿನ್ನ ಹುಡುಕೋ ಪ್ರಯತ್ನ ಮಾಡೋದಿಲ್ಲ. ನೀ ಎಲ್ಲೇ ಇದ್ದರೂ ಹೇಗೇ ಇದ್ದರೂ ಸಂತೋಷದಿಂದಿರು, ಆದರೆ ನನ್ನ್ “ಸ್ನೇಹ” ಮಾತ್ರ ನಿನಗೆ ದೊರಕದ ಮರೀಚಿಕೆ.
ಕನಸು ಕಟ್ಟುವ ಮೊದಲೇ ತೆರೆಮರೆಗೆ ಸರಿದು ಹೋಗುತ್ತೀಯೆಂದು ಅಂದುಕೊಂಡಿರಲಿಲ್ಲ. ವಿಧಿ ಎಷ್ಟೊಂದು ಕ್ರೂರ ಅಲ್ವಾ.? ನಿಜಕ್ಕೂ ನನ್ಗೆ ಆ ವಿಧಿಯ ಮೇಲೆ ಹುಚ್ಚು ಪ್ರೀತಿ. ಒಂದು ದಿನ ಆ ವಿಧಿಯ ನಿರ್ಣಯಗಳನ್ನು ಬುಡಮೇಲುಗೊಳಿಸಿ ನನ್ನದೇ ಪ್ರಪಂಚವನ್ನು ಸೃಷ್ಟಿಸಿಕೊಳ್ಳುತ್ತೇನೆ. ಅಬ್ಭಾ… ಎಂತಹಾ ಘೋರ ಅಲ್ವಾ ಈ ಏಕಾಂಗಿತನ…? ಅದೂ ಧೀರ್ಘವಾಗಿದ್ದಷ್ಟೂ ಗೊಂದಲಗಳನ್ನು ಸೃಷ್ಟಿಸುತ್ತಲೇ ಇರುತ್ತದೆ.
ಯಾಕೋ ಅರಗಿಸಿಕೊಳ್ಳಲೇ ಸಾಧ್ಯವಾಗುತ್ತಿಲ್ಲ ಇನ್ನೂ, ನೀನ್ಯಾಕೆ ಹೀಗಾದೆಯೆಂದು..? ನಾನು ಸಂತೋಷದಿಂದಿದ್ದೆ. ನನ್ನ ಜೀವನದಲ್ಲಿ ಸೆಳೆತದ ಪ್ರೀತಿಯ ಆಗಮನವಾಗಲೇಬರದಿತ್ತು. ಆದರೂ ಬಂತು. ಮತ್ತೆ ಮರೆಯಾಯಿತು. ಅದೊಂಥರಾ ಕಣ್ಣಾ ಮುಚ್ಚಾಲೆ ಆಟ. ಯಾಕೋ ಸಾಕಾಗಿ ಹೋಯಿತು ಕಣೇ. ಮನದ ಭಾವನೆಗಳನ್ನು ನಿಗ್ರಹಿಸಿಕೊಂಡು ನನ್ನ ಬೆಳವಣಿಗೆಯನ್ನು ಹಂತ ಹಂತವಾಗಿ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಏನಾದರೂ ಸರಿ ಇನ್ನೊಮ್ಮೆ ಬಲಿಯಾಗೋದಿಲ್ಲ ಈ ಪ್ರೀತಿಯ ಮೋಹಕ ಬಲೆಗೆ ಅಂದುಕೊಂಡೆ. ಆದರೆ ನನ್ನ ಮನಸ್ಸು ಎಚ್ಚರಿಸಿತು. ಪ್ರೀತಿ… ಅದು ಬರೀ ಹುಚ್ಚಲ್ಲ. ಅದೊಂದು ಅನುಬಂಧ. ಶಾಶ್ವತತೆಯ ಆರಂಭ ಎಂದು.
ನನ್ನ ಮನಸ್ಸಿನ ಮಾತುಗಳಿಗೆ ಸೋತು ಮರಳಿ ಬರುತ್ತಿದ್ದೇನೆ. ಆದರೆ ಎಲ್ಲೂ ನನ್ನ ಕಣ್ಣಿಗೆ ಬೀಳಬೇಡ. ನನ್ನ ಮನಸ್ಸು ಮತ್ತೆ ಸಹಿಸೋ ಸ್ಥಿತಿಯಲ್ಲಿಲ್ಲ. ಇನ್ನೆಂದಿಗೂ ನನ್ನ ಕಾಡಬೇಡ. ಸ್ವಚ್ಛಂದವಾಗಿ ಹಾರಾಡುತ್ತಿರುತ್ತೇನೆ. ಕತ್ತರಿಸಬೇಡ ನನ್ನ ಆನಂದಭರಿತ ಕ್ಷಣದ ರೆಕ್ಕೆಗಳನು… ಹಾಗೇ ಮರೆಯಾಗಿಬಿಡು ಸುಮ್ಮನೆ, ನನ್ನ ದಾರಿಗೆ ಬೆನ್ನು ಹಾಕಿ…
ಇಂತಿ ನಿನ್ನ ಭರವಸೆಯಾಗಿದ್ದವ
ವಿವೇಕ್…
ಸಾಹಿತ್ಯ ಎನ್ನುವುದು ನಮ್ಮ ಮನಸ್ಸುಗಳನ್ನು ಬೇರೆ ಬೇರೆ ಪ್ರಕಾರಗಳ ಮೂಲಕ ಸುಸ್ಥಿತಿಯಲ್ಲಿಡುವ ಮಾದ್ಯಮ. ಕಥೆ, ಕಾದಂಬರಿ, ವಿಮರ್ಶೆ, ಲೇಖನ, ಕವನ, ಹಾಸ್ಯ, ಪ್ರಬಂಧ, ನಾಟಕ, ರೂಪಕ, ರಂಗ ಗೀತೆ, ಕಾವ್ಯ, ಸಿನೆಮಾ ಹೀಗೆ ಹತ್ತು ಹಲವು ಪ್ರಕಾರಗಳ ಮೂಲಕವಾಗಿ ಜನರನ್ನು ತಲುಪುವ ಮಾದ್ಯಮವಾದ ಸಾಹಿತ್ಯ ಅವರವರ ಅಭಿರುಚಿಗೆ ತಕ್ಕಂತೆ ಉಣಬಡಿಸುತ್ತದೆ. ಅಕ್ಷರಸ್ಥರಾದರೂ, ಅನಕ್ಷರಸ್ಥರಾದರೂ, ಎಲ್ಲರಿಗೂ ಅರ್ಥವಾಗುವಂತೆ ಸಾಹಿತ್ಯವನ್ನು ವಿಭಿನ್ನತೆಗಳಲ್ಲಿ ಜೋಡಿಸಿಕೊಂಡಿರುವುದು ಮಾನವನ ಬೆಳವಣಿಗೆಯನ್ನು ಪ್ರತಿಬಿಂಬಿಸುತ್ತದೆ.
ಅನಾದಿ ಕಾಲದಿಂದಲೂ ಸಾಹಿತ್ಯಕ್ಕೆ ದೊರಕಿದಷ್ಟು ಮನ್ನಣೆ ಬೇರಾವುದಕ್ಕೂ ಸಿಕ್ಕಿರಲಿಕ್ಕಿಲ್ಲ. ಹಲವಾರು ರಾಜರ ಆಥಿತ್ಯದಲ್ಲಿ ಬೆಳೆದ ಹಲವಾರು ಕವಿಗಳು, ವಿದ್ವಾಂಸರುಗಳನ್ನು ಪಟ್ಟಿಮಾಡುತ್ತಾ ಹೋದರೆ ಕೊನೆಯೇ ಇಲ್ಲವೇನೋ…!